ಯೋಜನೆ ಹೆಸರಲ್ಲಿ ವಂಚನೆ: ಶಾಸಕ ಜೆ.ಸಿ.ಎಂ. ಆರೋಪ

ಹುಳಿಯಾರು

      ಭದ್ರಾ ಯೋಜನೆಯ ಈಗಿನ ಪ್ಲಾನ್ ಪ್ರಕಾರ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಾವ ಕೆರೆಗೂ ನೀರು ಹರಿಯುವುದಿಲ್ಲ ಎಂಬ ಆಘಾತಕಾರಿ ವಿಷಯವನ್ನು ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಬಹಿರಂಗ ಪಡಿಸಿದ್ದಾರೆ.

      ಚಿಕ್ಕನಾಯನಹಳ್ಳಿ ತಾಲ್ಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಭದ್ರಾ ಯೋಜನೆಯಿಂದ ಮಾತ್ರ ಸಾಧ್ಯ ಎಂದು ಕೆಲ ರಾಜಕಾರಣಿಗಳು ತಾಲ್ಲೂಕಿನ ಜನರನ್ನು ನಂಬಿಸಿದ್ದಾರೆ. ಹೀಗೆ ಹೇಳಿಕೊಂಡು ಅನೇಕ ಹೋರಾಟ ರೂಪಿಸಿ ಜನರನ್ನು ಸೆಳೆದಿದ್ದಾರೆ. ತಮ್ಮ ರಾಜಕೀಯ ಸಭೆಗೂ ಭದ್ರಾ ಹೆಸರೇಳಿ ಸಂಘಟನೆ ಸಹ ಮಾಡಿದ್ದಾರೆ. ಭದ್ರಾ ಯೋಜನೆಗೆ ಮಂಜೂರಾತಿ ದೊರೆತಾಗ ಇಲ್ಲಿನ ಜನ ಸಿಹಿ ಹಂಚಿ ಹರ್ಷ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಒಂದಲ್ಲಾ ಒಂದು ದಿನ ಭದ್ರಾ ನೀರು ತಾಲ್ಲೂಕಿನ ಬರಡು ಭೂಮಿಯನ್ನು ಹಸುರಾಗಿಸುವ ಕನಸು ಕಂಡಿದ್ದಾರೆ.
ಆದರೆ ಹುಳಿಯಾರಿನ ನಾಡಕಚೆರಿ ಬಳಿ ಬುಧವಾರ ನಡೆದ ರೈತರ ಮಾರುಕಟ್ಟೆಯ 5 ನೆ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದ ಶಾಸಕ, ಭದ್ರಾ ಹೆಸರೇಳಿ ಕೆಲ ರಾಜಕಾರಣಿಗಳು ತಾಲ್ಲೂಕಿನ ಜನರಿಗೆ ವಂಚಿಸಿದ್ದು ಯಾವುದೇ ಕಾರಣಕ್ಕೂ ಈಗನ ಪ್ಲಾನ್ ಪ್ರಕಾರ ತಾಲ್ಲೂಕಿನ ಒಂದೇ ಒಂದು ಕೆರೆಗೆ ನೀರು ಹರಿಯದೆ ಶಿರಾ ತಾಲ್ಲೂಕು ತಲುಪುತ್ತದೆ ಎಂದಿದ್ದಾರೆ.

       ಶಾಸರು ಹೇಳುವಂತೆ ಭದ್ರಾ ಯೋಜನೆಯ ಅಧಿಕಾರಿಗಳ ಮೊದಲ ಸಭೆ ಕರೆದಾಗ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಇಪ್ಪತ್ತಕ್ಕೂ ಹೆಚ್ಚು ಕೆರೆಗಳು ಯೋಜನೆಯಲ್ಲಿ ಸೇರಿರುವುದಾಗಿ ತಿಳಿಸಿದ್ದರು. ಈ ಬಗ್ಗೆ ನನಗೆ ಅನುಮಾನ ಮೂಡಿ ಅವರ ಕಚೆರಿಗೆ ಹೋಗಿ ಪ್ರೊಜೆಕ್ಟರ್ ಮೂಲಕ ಸ್ಕೀಂ ವಿವರಣೆಗೆ ಸೂಚಿಸಿದಾಗ ಸೀಗೆಬಾಗಿ, ಚಿಕ್ಕಬಿದರೆ ಸೇರಿದಂತೆ ಆ ಲೈನ್‍ನಲ್ಲಿ ಬರುವ ಎಲ್ಲಾ ಕೆರೆಗಳಿಗೂ ನೀರು ಬರುವಂತೆ ಮೊದಲು ಹೇಳಿದ್ದ ಅವರು ಬರಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

        ಭದ್ರಾ ಯೋಜನೆಯ ಈಗಿನ ಪ್ಲಾನ್ ಪ್ರಕಾರ ಹುಳಿಯಾರು ಹೋಬಳಿಗೆ ನಾಲೆ ಆರಂಭವಾಗುವುದೇ ನೆಲ ಮಟ್ಟದಿಂದ 27 ಅಡಿ ಕೆಳಗೆ. ಈ ಮಟ್ಟ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ ದಾಟುವವರೆವಿಗೂ ಹೀಗೆಯೇ ಮುಂದುವರಿಯುತ್ತದೆ. ಹೀಗಿರುವಾಗ ನೈಸರ್ಗಿಕವಾಗಿ ಯಾವ ಕೆರೆಗೂ ನೀರು ಹರಿಯೋದಿಲ್ಲ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜನರನ್ನು ನಂಬಿಸಿದ್ದಾರೆ ಅಷ್ಟೆ ಎಂದು ವಿವರಿಸಿದರು.

        ಈಗ ಈ ಸ್ಕೀಂಗೆ ಹೊಸದಾಗಿ ಲಿಫ್ಟ್ ಮೂಲಕ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಪ್ಲಾನ್ ಸೇರಿಸಿ ಹಣ ಬಿಡುಗಡೆ ಮಾಡಿಸುವ ಸವಾಲು ಎದುರಾಗಿದೆ. ಹಾಗಾಗಿ ತಾಲ್ಲೂಕಿನ ಜನ ಭದ್ರಾ ಬರುವ ಕನಸು ಕಂಡಿದ್ದು ಅವರ ಕನಸು ನನಸು ಮಾಡುವ ಸಲುವಾಗಿ ಎತ್ತರದ ಪ್ರದೇಶದಲ್ಲಿ ಡ್ಯಾಂ ನಿರ್ಮಾಣ ಮಾಡಿ ಅದಕ್ಕೆ ಭದ್ರಾ ನಾಲೆಯಿಂದ ನೀರನ್ನು ಲಿಫ್ಟ್ ಮಾಡಿ ಕೆರೆಗಳಿಗೆ ನೀರು ಹರಿಸಿ ಎಂದು ಸರ್ಕಾರ ಮತ್ತು ಎಂಜಿನಿಯರ್ ಅವರ ಬಳಿ ಕೇಳಿದ್ದೇನೆ. ಇದು ಆದರೆ ಬಹಳ ಸಂತೋಷ. ಇದು ಆಗದಿದ್ದರೂ ತಿಮ್ಲಾಪುರ ಕೆರೆಗೆ ಲಿಫ್ಟ್ ಮೂಲಕ ನೀರು ಎತ್ತಿ ಬೋರನಕಣಿವೆ ಜಲಾಶಯಕ್ಕಾದರೂ ನೀರು ಹರಿಸಿಯೇ ತೀರುತ್ತೇನೆ ಎಂದು ಭರವಸೆ ನೀಡಿದರು.

        ಜಿಪಂ ಸದಸ್ಯರುಗಳಾದ ವೈ.ಸಿ.ಸಿದ್ಧರಾಮಯ್ಯ, ತಿಮ್ಮನಹಳ್ಳಿ ಮಂಜುಳಮ್ಮ, ಉಪ ತಹಸೀಲ್ದಾರ್ ಎಚ್.ಮಂಜುನಾಥ್, ಜಿಪಂ ಮಾಜಿ ಸದಸ್ಯೆ ಮಂಜುಳಾ ಗವಿರಂಗಯ್ಯ, ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ಎಪಿಎಂಸಿ ಮಾಜಿ ಅಧ್ಯಕ್ಷ ಶಿವರಾಜ್, ಚಲನಚಿತ್ರ ನಿರ್ಮಾಪಕ ನಂದಿಹಳ್ಳಿ ಶಿವಣ್ಣ, ನಿವೃತ್ತ ಶಿಕ್ಷಕ ಡಿ.ಸಿದ್ಧಬಸವಯ್ಯ ಮತ್ತಿತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link