ನಾಳೆ ಸಿದ್ದು-ಗೌಡರ ಸಭೆಯಲ್ಲಿ ನಾನು-ಎಸ್‍ಪಿಎಂ ಇಬ್ಬರೂ ಭಾಗವಹಿಸುತ್ತೇವೆ : ಕೆಎನ್‍ಆರ್

 ಮಧುಗಿರಿ

       ಮಾಜಿ ಪ್ರಧಾನಿಗಳಿಗೆ ಹಾಸನ ಕ್ಷೇತ್ರದಲ್ಲಿ ಎಲ್ಲೂ ಜಾಗವಿರಲಿಲ್ಲವೆ ಅಥವಾ ಯಾರಾದರೂ ಹಾಸನದಿಂದ ಸ್ಪರ್ಧಿಸುವುದು ಬೇಡ ಎಂದು ಹೇಳಿದ್ದಾರೆಯೆ? ಇವರ ನಡೆಯಿಂದಾಗಿ ಜಿಲ್ಲೆಯ ಸಜ್ಜನ ರಾಜಕಾರಣಿ ಎಸ್‍ಪಿಎಂರವರಿಗೆ ರಾಜಕೀಯ ಸಾವವನ್ನು ತಂದಿರುವುದು ಸೂಕ್ತವಲ್ಲ ಎಂದು ಮಾಜಿ ಶಾಸಕ ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮೈತ್ರಿ ಪಕ್ಷದ ವಿರುದ್ಧ ಗುಡುಗಿದರು.

          ಪಟ್ಟಣದ ಎಂ.ಎನ್.ಕೆ. ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾಸನದ ಬಿಜೆಪಿ ಅಭ್ಯರ್ಥಿ ಎ.ಮಂಜು ಈ ಮೊದಲೇ ಹೇಳಿದ್ದರು, ದೇವೆಗೌಡರು ಸ್ಪರ್ಧಿಸುವುದಾರೆ ನಾನು ನಿಲ್ಲುವುದಿಲ್ಲವೆಂದು. 44 ಜನ ಹಾಲಿ ಕಾಂಗ್ರೆಸ್ ಸಂಸದರಲ್ಲಿ ಮುದ್ದಹನುಮೆಗೌಡರಿಗೆ ಮಾತ್ರ ಸ್ಪರ್ಧಿಸಲು ಅವಕಾಶ ನೀಡದೆ ದೇವೆಗೌಡರು ಈ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದು ಖಂಡನೀಯ. ಮೈಸೂರಿನಲ್ಲಿ ಸಿದ್ದರಾಮಯ್ಯನವರಿಗೆ, ತುಮಕೂರಿನಲ್ಲಿ ಮುದ್ದಹನುಮೆಗೌಡರಿಗೆ ಹಾಗೂ ಮಧುಗಿರಿಯಲ್ಲಿ ನನಗೆ ರಾಜಕೀಯ ಸವಾಲಾಗಿದ್ದು ಮಾಜಿ ಪ್ರಧಾನಿಗಳೆ ಎಂಬುದನ್ನು ಪಕ್ಷದ ಕಾರ್ಯಕರ್ತರೆ ಹೇಳುತ್ತಿದ್ದಾರೆ ಎಂದರು.

          ಕಾಂಗ್ರೆಸ್ ಪಕ್ಷ ಬಡವರ ಪರವಾಗಿದ್ದು, ಅವರ ಅಭಿವೃದ್ದಿಯತ್ತ ಸದಾ ಚಿಂತನೆ ನಡೆಸಿಕೊಂಡು ಬಂದಿದೆ. ಸಣ್ಣ ಸಮುದಾಯಗಳನ್ನು ಗುರುತಿಸುವಲ್ಲಿ ನಮ್ಮ ಪಕ್ಷವು ಎಲ್ಲ ಪಕ್ಷಗಳಿಗೂ ಮಾದರಿಯಾಗಿದೆ. ದೇವರಾಜು ಅರಸು, ವೀರಪ್ಪ ಮೊಯ್ಲಿ, ಧರ್ಮಸಿಂಗ್‍ರವರು ಮುಖ್ಯಮಂತ್ರಿಗಳಾದಾಗ ಆ ಜನಾಂಗದ ಮತ್ತೋರ್ವ ಸದಸ್ಯರು ವಿಧಾನಸೌಧಕ್ಕೆ ಆಯ್ಕೆಯಾಗಿರಲಿಲ್ಲ. ಆದರೂ ಅವರನ್ನು ಗುರುತಿಸಿ ಅಧಿಕಾರ ನೀಡಿದ್ದು ಇದೇ ಕಾಂಗ್ರೆಸ್ ಪಕ್ಷ.

       ನಾನು ಶಾಸಕನಾಗಿದ್ದ ಸಮಯದಲ್ಲಿ ಕ್ಷೇತ್ರದಲ್ಲಿ 74 ಕೋಟಿ ರೂ. ಸಾಲ ಮನ್ನಾ ಮಾಡಿದ್ದು, ಪ್ರತಿ ಬಡ ಕುಟುಂಬಕ್ಕೂ ಬಿ.ಪಿ.ಎಲ್ ಕಾರ್ಡ್ ನೀಡಲಾಗಿದೆ. ಪಿಂಚಣಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲಾಗಿದೆ. ಖಾತೆ ಆಂದೋಲನ ಕೈಗೊಳ್ಳಲಾಗಿದೆ ಹಾಗೂ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ನಿಭಾಯಿಸಿದ್ದೇನೆ. ಈಗ ಕುಡಿಯುವ ನೀರಿಗಾಗಿ ಜನರು ದಂಗೆ ಎದ್ದು, ಜನರು ಸ್ಥಳೀಯ ಜನ ಪ್ರತಿನಿಧಿಗಳಿಗೆ ಒಡೆಯುವ ಪರಿಸ್ಥಿತಿಗೆ ಬಂದಿದ್ದಾರೆ. ಇದರ ಬಗ್ಗೆ ಚಿಂತಿಸ ಬೇಕಾದ ಶಾಸಕರು ಮಾತ್ರ ಶಾಂತರಾಗಿರುವುದು ಸರಿಯಲ್ಲವೆಂದರು.

          ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಗುಲಾಮರಲ್ಲ. ಅವರು ಸ್ವತಂತ್ರರು. ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಾದುದು ಎಲ್ಲಾ ಪ್ರಜಾ ಪ್ರತಿನಿಧಿಗಳ ಕರ್ತವ್ಯ. ಜನರೆ ನನಗೆ ಹೈಕಮಾಂಡ್. ಕೆಪಿಸಿಸಿ ಹಾಗೂ ಎಐಸಿಸಿಯ ಆದೇಶಗಳಿಗೆ ಹಾಗೂ ನಿರ್ಧಾರಗಳಿಗೆ ನಾನು ಬದ್ದನಾಗಿದ್ದೇನೆ. ಅಲ್ಲದೆ ಇದೇ ತಿಂಗಳ 10 ರಂದು ನಡೆಯುವ ಮೈತ್ರಿ ಸರ್ಕಾರದ ಸಮಾವೇóಶಕ್ಕೆ ಮಾನ್ಯ ಸಿದ್ದರಾಮಯ್ಯನವರು ಹಾಗೂ ದೇವೆಗೌಡರು ಭಾಗವಹಿಸಲಿದ್ದು, ಈ ಸಮಾವೇಶದಲ್ಲಿ ನಾನೂ ಸಹ ಮುದ್ದಹನುಮೆಗೌಡರವರೊಂದಿಗೆ ಭಾಗವಹಿಸಲಿದ್ದೇನೆ.

         ಈ ಸಮಾವೇಷದಲ್ಲಿ ಮುಂದಿನ ನಡೆ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಹಾಗಾಗಿ ತಾಲ್ಲೂಕಿನ ಜನತೆ ಈ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ತಾಪಂ ಸದಸ್ಯ ಜೆ.ಡಿ.ವೆಂಕಟೇಶ್ ಮಾತನಾಡಿ, ದೇವೆಗೌಡ 86 ವರ್ಷದ ನವಯುವಕ ಹಾಗೂ ಹಾಸನದಿಂದ ಬರೋ ಹೇಮಾವತಿಗೆ ಅಡ್ಡಗಟ್ಟಿರೋ ವ್ಯಕ್ತಿಗೆ ನಾವು ಓಟ್ ಹಾಕ್ಬೇಕಾ?, ಇಂತಹವರನ್ನು ಕರೆ ತಂದಿರುವ ಪರಮೇಶ್ವರ್‍ಗೆ ನಾಚಿಕೆಯಾಗಲ್ವಾ ಎಂದು ಲೇವಡಿ ಮಾಡಿದರು.

        ಮಾಜಿ ಗ್ರಾಪಂ ಸದಸ್ಯ ಈರಣ್ಣ ಮಾತನಾಡಿ, ಎ. ಕೃಷ್ಣಪ್ಪನ ಸಾವಿಗೆ ಕಾರಣವಾದ ದೇವೆಗೌಡರ ಕುಟುಂಬಕ್ಕೆ ಯಾವುದೇ ಕಾರಣಕ್ಕೂ ಮಧುಗಿರಿ ಜನತೆ ವ್ಮಣೆ ಹಾಕುವುದಿಲ್ಲ ಮತ್ತು ರಾಜ್ಯದಲ್ಲಿ ಮೈತ್ರಿ ಇರಬಹುದು. ಆದರೆ ಸ್ಥಳೀಯವಾಗಿ ಯಾವುದೇ ಕಾರಣಕ್ಕೂ ನಾವು ಮೈತ್ರಿ ಒಪ್ಪುವುದಿಲ್ಲ ಎಂದರು.

       ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ನಾಗರಾಜಪ್ಪ ಬಸವನಹಳ್ಳಿ, ಪುರಸಭಾ ಸದಸ್ಯರುಗಳಾದ ತಿಮ್ಮರಾಯಪ್ಪ, ಲಾಲಾಪೇಟೆ ಮಂಜುನಾಥ್, ಎಂ.ಕೆ.ನಂಜುಂಡಯ್ಯ, ಅಯೂಬ್ ಇನ್ನಿತರರು ಮಾತನಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link