ಕೊರಟಗೆರೆ :
ಕಾಮಗಾರಿ ಕಳಪೆಯಿಂದ ಚರಂಡಿಯ ಡಕ್ಟ್ ಕುಸಿತವಾಗಿ ಆಟೋವೊಂದು ನಿಯಂತ್ರಣ ತಪ್ಪಿ ಕೆಳಗೆ ಬಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಟೋ ಬಿದ್ದ ರಭಸಕ್ಕೆ ವ್ಯಕ್ತಿಗೆ ಸಮಸ್ಯೆಯಾಗಿದ್ದರೆ ಯಾರು ಹೊಣೆಯಾಗುತಿದ್ದರು ಎಂದು ಆರೋಪಿಸಿ ಊರಿನ ನೂರಾರು ಮಂದಿ ಸಾರ್ವಜನಿಕರು ಗ್ರಾಮ ಪಂಚಾಯ್ತಿ ಮುಂಭಾಗ ಪಂಚಾಯ್ತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರದ 2 ನೇ ವಾರ್ಡ್ನಲ್ಲಿ ಈ ಸಮಸ್ಯೆ ತಲೆ ದೋರಿದ್ದು, ಈ ಹಿಂದಿನ ಗುತ್ತಿಗೆದಾರ ಸಿಸಿ ರೋಡ್ ಹಾಗೂ ಚರಂಡಿ ಕಾಮಗಾರಿಗಳನ್ನು ಕಳಪೆ ಮಾಡಿದ್ದಾನೆ. ಇಷ್ಟೆಲ್ಲ ಅವಘಡಕ್ಕೆ ಗ್ರಾಪಂ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಪಂಚಾಯ್ತಿ ಮುಂದೆ ಪ್ರತಿಭಟಿಸಿದರು.
ಈ ಹಿಂದೆ ಹನುಮಂತೇಗೌಡರ ಮಗ ಸೂರ್ಯ ಎಂಬುವರು ಈ ಕಾಮಗಾರಿಯ ನಿರ್ವಹಣೆ ಮಾಡಿದ್ದು, ಕಾಮಗಾರಿ ಕಳಪೆಯಾಗಿ ಚರಂಡಿ ನೀರು ಸಮರ್ಪಕವಾಗಿ ಹರಿಯದೆ ಸಮಸ್ಯೆ ಸೃಷ್ಟಿಯಾಗಿದೆ. ಚರಂಡಿಯ ಕಷ್ಮಲ ನೀರು ರಸ್ತೆಯಲ್ಲಿ ನಿಂತಿರುವುದಲ್ಲದೆ ಹಳ್ಳ ಬಿದ್ದು, ಆಟೋ ಚಾಲಕನಿಗೆ ಉಬ್ಬು _ ತಗ್ಗು ತಿಳಿಯದೆ ಆಟೋ ಪಲ್ಟಿ ಹೊಡೆದಿದೆ. ಕಳಪೆ ಕಾಮಗಾರಿಯೇ ಆಟೋ ಬೀಳಲು ಕಾರಣ ಎಂದು ಆರೋಪಿಸಿದ್ದಾರೆ.
ನಾವು ಗೆದ್ದು ಕೇವಲ 4-5 ತಿಂಗಳುಗಳಾಗಿದೆ ಅಷ್ಟೆ. ಇಲ್ಲಿಯವರೆಗೂ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಈ ಹಿಂದಿನ ಸದಸ್ಯರುಗಳು ಈ ಕೆಲಸ ಮಾಡಬೇಕಿತ್ತು. ಇಂತಹ ಹತ್ತು ಹಲವು ಸಮಸ್ಯೆಗಳಿವೆ, ನಾವು ಮುಂದಿನ ದಿನಗಳಲ್ಲಿ ಅವುಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.
-ಮಧುಸೂದನ್ ಎ.ಆರ್. ಗ್ರಾಪಂ ಸದಸ್ಯ, ಅಕ್ಕಿರಾಂಪುರ
ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಯಾಗಿ ನಾನು ಇಲ್ಲಿಗೆ ಬಂದು ಕೇವಲ 2 ತಿಂಗಳುಗಳಾಗಿವೆ. ಈಗ 15ನೆ ಹಣಕಾಸು ಯೋಜನೆಯಲ್ಲಿ ಕೆಲವೊಂದು ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಈ ಸಮಸ್ಯೆಯ ಕಾಮಗಾರಿಯು ನೀಲಿ ನಕ್ಷೆಯಲ್ಲಿದ್ದು, ಅತಿ ಶೀಘ್ರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
-ಪ್ರತಿಭಾ, ಪಿಡಿಓ, ಅಕ್ಕಿರಾಂಪುರ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
