ಗುಬ್ಬಿ
ಪಟ್ಟಣದ ಶ್ರೀಚನ್ನಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಪ್ರತಿವರ್ಷದಂತೆ ರಥಸಪ್ತಮಿ ಅಂಗವಾಗಿ ಸಾಮೂಹಿಕ ಸೂರ್ಯ ನಮಸ್ಕಾರ ಯೋಗಾಭ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಪಟ್ಟಣ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ 150 ಕ್ಕೂ ಹೆಚ್ಚು ಯೋಗಪಟುಗಳು ಸಾಮೂಹಿಕ 108 ಮಂತ್ರಘೋಷಣೆ ಮೂಲಕ ಸೂರ್ಯ ನಮಸ್ಕಾರ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸೂರ್ಯನ ಕಿರಣಗಳೆ ಮಾನವನ ಚೈತನ್ಯಕ್ಕೆ ಕಾರಣವಾಗಿದೆ. ಹಾಗಾಗಿ ಸೂರ್ಯ ನಮಸ್ಕಾರವನ್ನು ಪ್ರತಿನಿತ್ಯ ಅಭ್ಯಾಸಮಾಡಬೇಕು ಎಂದು ವಕೀಲ ರವೀಂದ್ರನಾಥ ಠಾಕೂರ್ ತಿಳಿಸಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ರಥಸಪ್ತಮಿ ಪ್ರಯುಕ್ತ ಸಾಮೂಹಿಕವಾಗಿ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಬ್ರಹ್ಮಾಂಡದಲ್ಲಿ ಸೂರ್ಯನಿಗಿಂತ ಅದ್ಬುತವಾದ ವಸ್ತು ಮತ್ತೊಂದಿಲ್ಲ. ಪ್ರತ್ಯಕ್ಷ ದೇವರೆ ಸೂರ್ಯನಾಗಿದ್ದು ಮಾಘ ಮಾಸದ ಶುದ್ದ ಶುಕ್ಲ ಪಕ್ಷದ ಸಪ್ತಮಿಯ ದಿನ ಸೂರ್ಯನು ಜನ್ಮ ದಿನವಾದುದರಿಂದ ಇದನ್ನು ರಥ ಸಪ್ತಮಿ ಹಬ್ಬವೆಂದು ಕರೆಯುತ್ತಾರೆ. ಹಾಗಾಗಿ ಈ ದಿನ ಬಹಳ ವಿಶೇಷ ದಿನವೆಂದು ತಿಳಿಸಿದರು.
ಸಮಿತಿಯ ವ್ಯವಸ್ಥಾಪಕ ರುದ್ರಮೂರ್ತಿ ಮಾತನಾಡಿ ಪ್ರಮುಖ ಮಾತನಾಡಿ ಯೋಗವನ್ನು ಪ್ರತಿದಿನ ಅರ್ಧ ತಾಸುಗಳಾದರು ಪ್ರತಿಯೊಬ್ಬರು ಮಾಡಬೇಕು. ಇದರಿಂದ ಇಡಿ ದೇಹವೆ ಸೌಖ್ಯವಾಗಿರುತ್ತದೆ. ಅಲ್ಲದೆ ಉತ್ತಮ ಆರೋಗ್ಯಕ್ಕೂ ಕಾರಣವಾಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷ ಗಂಗಣ್ಣ, ಕಾರ್ಯದರ್ಶಿ ಬಸವರಾಜು, ಶಿಕ್ಷಕರಾದ ಅಂಜನ್ ಕುಮಾರ್, ರಮೇಶ್ ಮುಂತಾದವರು ಭಾಗವಹಿಸಿದ್ದರು.