ತುರುವೇಕೆರೆ
ಜೂನ್ 14 ರಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪ್ರತಿಜ್ಞಾವಿಧಿ ಕಾರ್ಯಕ್ರಮವು ಪ್ರತಿಯೊಬ್ಬ ಕಾಂಗ್ರೆಸ್ಸಿಗರ ಪದಗ್ರಹಣ ಕಾರ್ಯಕ್ರಮವಾಗಬೇಕು ಎಂದು ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ಬಿ.ಎಸ್.ವಸಂತ್ಕುಮಾರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಇಂತಹ ಒಂದು ಅಭೂತಪೂರ್ವ ಕಾರ್ಯಕ್ರಮವನ್ನು ಮೊದಲ ಬಾರಿಗೆ ಹಮ್ಮಿಕೊಂಡಿದ್ದು, ಇದನ್ನು ಯಶಸ್ವಿಗೊಳಿಸಬೇಕಾದ್ದು ಪ್ರತಿಯೊಬ್ಬ ಕಾಂಗ್ರೆಸ್ ಮುಖಂಡರುಗಳ ಹಾಗೂ ಕಾರ್ಯಕರ್ತರ ಜವಾಬ್ದಾರಿಯಾಗಿದೆ. ಜೂನ್ 14 ರಂದು ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಹಾಗೂ ಪಟ್ಟಣದ ವಾರ್ಡ್ಗಳಲ್ಲಿ ಪದಗ್ರಹಣವನ್ನು ಜನ ವೀಕ್ಷಣೆ ಮಾಡಲು ಝೂಮ್ ಕಾನ್ಪರೆನ್ಸ್ ಜೊತೆಗೆ ಟಿ.ವಿ. ಚಾನಲ್ಗಳಲ್ಲಿ ನೋಡುವಂತ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇದನ್ನು ಯಶಸ್ವಿಗೊಳಿಸಲು ಕಾರ್ಯಕರ್ತರಿಗೆ ಈಗಾಗಲೆ ಸೂಚನೆ ನೀಡಲಾಗಿದೆ. ಡಿಕೆಶಿ ಅಭಿಮಾನಿಗಳು ತುರುವೇಕೆರೆಯಲ್ಲಿ ಹೆಚ್ಚು ಇರುವುದರಿಂದ ಅವರನ್ನು ಸಹ ವಿಶ್ವಾಸಕ್ಕೆ ಪಡೆದು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕೆಳಮಟ್ಟದಲ್ಲಿ ಪಕ್ಷವನ್ನು ಕಟ್ಟಬೇಕೆಂಬ ಕಲ್ಪನೆ ಡಿ.ಕೆ.ಶಿವಕುಮಾರ್ರಲ್ಲಿದ್ದು ಅದರಂತೆ ಪ್ರತಿ ಹಳ್ಳಿಗಳ ಕಾರ್ಯಕರ್ತರಿಗೆ ಬಲ ತುಂಬಿ, ಕಾಂಗ್ರೆಸ್ ಪಕ್ಷದ ಸಂಘಟನೆ ಜೊತೆಗೆ ಬೂತ್ ಮಟ್ಟದಿಂದ ಮೇಲಕ್ಕೆ ತರುವ ನಿಟ್ಟಿನಲ್ಲಿ ಮುಂಬರುವ ಚುನಾವಣೆಗಳಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸುವಂತಾಗಬೇಕು ಎಂದರು.
ಕೃಷಿ ಇಲಾಖೆಯಲ್ಲಿ ಬೀಜದ ಕೊರತೆಯಿದ್ದು, ಬಿಜೆಪಿ ಸರ್ಕಾರದಲ್ಲಿ ರೈತನಿಗೆ ಅನುಕೂಲಕ್ಕಿಂತ ಅನನುಕೂಲವೆ ಹೆಚ್ಚಾಗಿದೆ. ಕೊಬ್ಬರಿ ಬೆಲೆ ಕುಸಿತಗೊಂಡಿದ್ದು, ರೈತನಿಗೆ ಬೆಂಬಲ ಬೆಲೆ ನೀಡದಿದ್ದಲ್ಲಿ ಹೋರಾಟ ಅನಿವಾರ್ಯವಾಗಲಿದೆ. ಟ್ರ್ಯಾಕ್ಟರ್ ವಾಹನ ಹೊಂದಿದಂತಹ ರೈತರ ಬಿಪಿಎಲ್ ಕಾರ್ಡ್ ಕಿತ್ತುಕೊಳ್ಳುತ್ತಿದ್ದು, ಸಣ್ಣ ಹಿಡುವಳಿದಾರರಿಗೆ ತೊಂದರೆಯಾಗುತ್ತಿದೆ. ರೈತರ ಪಂಪ್ಸೆಟ್ಗೆ ಮೀಟರ್ ಅಳವಡಿಸಿ ವಿದ್ಯುತ್ ಬಿಲ್ ವಸೂಲಿ ಮಾಡಲು ಬಿಜೆಪಿ ಸರ್ಕಾರ ಮುಂದಾಗಿದೆ. ಇದರಿಂದ ಕೃಷಿ ಹಾಗೂ ಸಣ್ಣಪುಟ್ಟ ಕೈಗಾರಿಕೆಗಳು ನಿಂತು ಹೋಗಿ ರಾಜ್ಯದ ಅಭಿವೃದ್ದಿ ಕುಂಠಿತಗೊಳ್ಳಲಿದೆ. ರೈತರು ರೊಚ್ಚಿಗೇಳುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಯಥಾಸ್ಥಿತಿ ಕಾಪಾಡಲಿ ಎಂದರು.
ಈ ಸಂದರ್ಭದಲ್ಲಿ ತಾ.ಪಂ.ಉಪಾಧ್ಯಕ್ಷ ಮಂಜುನಾಥ್, ಕಾಂಗ್ರೆಸ್ ಮುಖಂಡರುಗಳಾದ ಎಂ.ಡಿ.ಮೂರ್ತಿ, ಬುಗುಡನಹಳ್ಳಿ ಕೃಷ್ಣಮೂರ್ತಿ, ಜಗದೀಶ್, ರವಿ ಬಿಗನೇನಹಳ್ಳಿ, ವಿಶ್ವನಾಥ್, ಮಾಯಸಂದ್ರ ಸುಬ್ರಹ್ಮಣ್ಯ, ಗಿರೀಶ್, ರಿಯಾಜ್, ಮಮ್ತಾಜ್ ಬಾಯಿ, ಮಹಮದ್ ಸಿಖಂದರ್, ನಂಜುಂಡಪ್ಪ, ಕುಮಾರ್, ರವಿ, ಬೋರೇಗೌಡ, ಸೈಫುಲ್ಲಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








