ತುಮಕೂರು
ತುಮಕೂರು ನಗರದಲ್ಲಿ ಹಂದಿ ಹಾವಳಿ ನಿಯಂತ್ರಿಸಲು ತುಮಕೂರು ಮಹಾನಗರ ಪಾಲಿಕೆಯು ಕಾರ್ಯಾಚರಣೆ ಕೈಗೊಂಡಿದ್ದಾಗ, ಗುಂಪೊಂದು ಕಲ್ಲೆಸೆದು ಹಲ್ಲೆಗೆ ಯತ್ನಿಸಿರುವ ಆತಂಕಕಾರಿ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.ಈ ರೀತಿ ಹಲ್ಲೆ ನಡೆಯುತ್ತಿರುವುದು ಇದು ಎರಡನೆಯದಾಗಿದೆ. ಸುಮಾರು ನಾಲ್ಕೈದು ವರ್ಷಗಳ ಹಿಂದೆ ಸಹ ಇದೇ ರೀತಿ ಪಾಲಿಕೆ ಸಿಬ್ಬಂದಿ ಮೇಲೆ ಹಲ್ಲೆ ನಡೆದು, ಸಿಬ್ಬಂದಿ ಗಾಯಗೊಂಡಿದ್ದರು.
ಪಾಲಿಕೆಯ ಆರೋಗ್ಯ ಶಾಖೆಯ ಸಿಬ್ಬಂದಿ ಸೆ. 7 ರಂದು ಬೆಳಗ್ಗೆ ಸುಮಾರು 6 ಗಂಟೆಯಲ್ಲಿ ಬೀಡಾಡಿ ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದಾಗ, ನಗರದ ಬಟವಾಡಿಯ ಅಕ್ಕತಂಗಿ ಕೆರೆ ಬಳಿ ಹಲ್ಲೆ ಯತ್ನ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಆದರೆ ಕಾರ್ಯಾಚರಣೆ ಮಾತ್ರ ಸ್ಥಗಿತವಾಗಿದೆ. ಈ ಪ್ರಸಂಗ ಈಗ ಬಹಿರಂಗವಾಗಿದ್ದು, ಪಾಲಿಕೆಯಲ್ಲಿ ಚರ್ಚೆಗೊಳ್ಳುತ್ತಿದೆ.
ಹಂದಿ ಹಿಡಿಯುವವರು ಸುಮಾರು 30 ಜನರ ತಂಡದೊಡನೆ ತುಮಕೂರು ನಗರಕ್ಕೆ ಆಗಮಿಸಿದ್ದರು. ಜೊತೆಗೆ ಒಂದು ಲಾರಿಯೂ ಇತ್ತು. ಅವರೊಂದಿಗೆ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್, ಪರಿಸರ ಇಂಜಿನಿಯರ್ಗಳು, ಆರೋಗ್ಯ ನಿರೀಕ್ಷಕರು ಹಾಗೂ ಇತರರು ಇದ್ದರು. ಅಕ್ಕತಂಗಿ ಕೆರೆ ಬಳಿ ಹಂದಿಗಳನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸಲಾಯಿತು. ಆದರೆ ಆ ಹೊತ್ತಿಗೆ ಯಾರೋ ಕೆಲ ಆಗಂತುಕರು ದ್ವಿಚಕ್ರ ವಾಹನಗಳಲ್ಲಿ ಬಂದು ದೂರದಿಂದ ಕಲ್ಲುಗಳನ್ನು ಎಸೆಯತೊಡಗಿದರು. ಹಿಡಿದಿದ್ದ ಹಂದಿಗಳೂ ಓಡಿಹೋಗಬೇಕು ಹಾಗೂ ಹೊಸದಾಗಿ ಹಿಡಿಯಲೂಬಾರದು ಎಂಬಂತೆ ಪೊದೆಗಳ ಮರೆಯಲ್ಲಿ ಅಡಗಿಕುಳಿತು ಹಂದಿ ಹಿಡಿಯುವವರತ್ತ ಹಾಗೂ ಪಾಲಿಕೆ ಸಿಬ್ಬಂದಿಯತ್ತ ಕಲ್ಲು ತೂರಲಾರಂಭಿಸಿದರು. ಇದರಿಂದ ಹಂದಿ ಹಿಡಿಯಲು ಬಂದಿದ್ದ ತಂಡದವರು ಸೂಕ್ತ ರಕ್ಷಣೆಯಿಲ್ಲವೆಂದು ವಿಚಲಿತರಾದರು. ಇತ್ತ ಪಾಲಿಕೆ ಸಿಬ್ಬಂದಿಗೂ ದಿಕ್ಕುತೋಚದಂತಾಯಿತು. ಅದೃಷ್ಟವಶಾತ್ ಅಪಾಯದಿಂದ ಪಾರಾದ ಇವರುಗಳು ತಕ್ಷಣವೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ವಾಪಸ್ಸಾಗಿದ್ದಾರೆ. ಅತ್ತ ಆಗಂತುಕರೂ ಕಲ್ಲೆಸೆದು ಪರಾರಿಯಾಗಿದ್ದಾರೆನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
