ಕುಣಿಗಲ್,
ಪೊಲೀಸ್ ಇಲಾಖೆಯು ದಲಿತರ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ಹೆಚ್ಚಿನ ಗಮನ ನೀಡುವುದರ ಜೊತೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಆದ್ಯತೆ ನೀಡಲಾಗುವುದು ಎಂದು ಉಪವಿಭಾಗದ ಡಿವೈಎಸ್ಪಿ ರಾಮಲಿಂಗೇಗೌಡ ತಿಳಿಸಿದರು.
ಪಟ್ಟಣದ ಪೊಲೀಸ್ ಕಛೇರಿಯಲ್ಲಿ ಕುಣಿಗಲ್ ಹಾಗೂ ತುರುವೇಕೆರೆ ತಾಲ್ಲೂಕುಗಳ ಉಪವಿಭಾಗದ ದಲಿತರ ಕುಂದುಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ,ಕಳೆದ 4 ತಿಂಗಳಿಂದಲೂ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ದಲಿತರ ಕುಂದುಕೊರತೆಯ ಸಭೆ ಕರೆಯಲು ವಿಳಂಬವಾಗಿದ್ದು,ಈ ಉಪವಿಭಾಗದಲ್ಲಿ ಯಾವುದೇ ಅಹಿತಕರ ಘಟನೆಗಳ ನಡೆಯದೆ ಚುನಾವಣೆ ಸುಗಮವಾಗಿ ನಡೆಯಿತು, ದಲಿತರಲ್ಲಿ ಅನೇಕ ಸಮಸ್ಯೆಗಳಿದ್ದು, ಪೊಲೀಸ್, ಕಂದಾಯ, ಗ್ರಾ.ಪಂ, ಅಬಕಾರಿ ಸೇರಿದಂತೆ ಹಲವಾರು ಸಮಸ್ಯೆಗಳು ಇರುವುದರಿಂದ ಮುಂದಿನ ದಿನಗಳಲ್ಲಿ ಬೇರೆ-ಬೇರೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ದಲಿತರ ಸಮಸ್ಯೆಗಳನ್ನ ಹಂತ-ಹಂತವಾಗಿ ಬಗೆಹರಿಸಲಾಗುವುದು.
ಸಮಾಜದಲ್ಲಿ ಯಾವುದೇ ವ್ಯಕ್ತಿಯೂ ಸಮಾಜ ಒಡೆಯುವಂತಹ ಕೆಲಸಗಳನ್ನ ಮಾಡಬಾರದು. ದಲಿತರೊಂದಿಗೆ ಇಲಾಖೆಯು ಸದಾ ಇದ್ದು,ತಮ್ಮ ಯಾವುದೇ ಸಮಸ್ಯೆಗಳನ್ನ ನೇರವಾಗಿ ತಮ್ಮ ಗಮನಕ್ಕೆ ತಂದರೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಿಪಿಐ ಬಾಲಾಜಿಸಿಂಗ್ ಮಾತನಾಡಿ, ಗ್ರಾಮಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ಮಾರಕ ಖಾಯಿಲೆಗಳಿಂದ ದೂರ ಇರುವುದರ ಜೊತೆಯಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಜನಾಂಗವೂ ಒತ್ತು ನೀಡಬೇಕಾಗಿದೆ ಎಂದರು.
ತುರುವೇಕೆರೆ ದಲಿತ ಮುಖಂಡರಾದ ಪುಟ್ಟರಾಜು ಮಾತನಾಡುತ್ತಾ,ದಂಡಿನಶಿರ ಠಾಣೆಯಲ್ಲಿ ಪಿಎಸ್ಐ ಇಲ್ಲದೇ ಇರುವುದರಿಂದ ಕೂಡಲೇ ಕ್ರಮ ತೆಗೆದುಕೊಳ್ಳಬೇಕು,ದಲಿತರು ಪ್ರತಿಭಟನೆ ಮಾಡಿದರೆ,ಪ್ರಕರಣ ದಾಖಲಿಸುವುದನ್ನ ಕೈಬಿಡಬೇಕೆಂದು ಒತ್ತಾಯಿಸಿದರು .ದಲಿತರಿಗೆ ದೇವಸ್ಥಾನ ಪ್ರವೇಶದ ಬಗ್ಗೆ ನಾಮಫಲಕ,ಸ್ಮಶಾನ,ಕುಡಿಯುವ ನೀರು ಮೂಲ ಸೌಲಭ್ಯ,ಅಂಬೇಡ್ಕರ್ ಭವನ,ಅಕ್ರಮ ಮದ್ಯ ಮಾರಾಟ,ಕಾರ್ಮಿಕರಿಗೆ ರಕ್ಷಣೆ,ಗ್ರಾಮಗಳಲ್ಲಿ ಬೀಟ್ ವ್ಯವಸ್ಥೆ ಹಾಗೂ ಠಾಣೆಗೆ ಬರುವ ದಲಿತರ ದೂರುಗಳಿಗೆ ಕೂಡಲೇ ಸ್ಪಂದಿಸುವಂತೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಸಿಪಿಐ ಬಾಲಾಜಿಸಿಂಗ್,ಪಿಎಸ್ಐ ಅನಿಲ್ ಕುಮಾರ್,ದಲಿತ ಮುಖಂಡರಾದ ವರದರಾಜು, ರಾಮಚಂದ್ರಯ್ಯ, ದಲಿತ್ ನಾರಾಯಣ್, ಶಿವಶಂಕರ್, ದಂಡೋರ ಅಧ್ಯಕ್ಷ ನರಸಿಂಹಮೂರ್ತಿ, ಕೃಷ್ಣರಾಜು, ನಂಜಪ್ಪ, ಸಿದ್ಧರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
