ಗುಬ್ಬಿ :
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಧ್ವಜ ವಿರೂಪಗೊಳಿಸಿದ ಪ್ರಕರಣವು ಎರಡು ವರ್ಷ ಕಳೆದಿದ್ದರೂ, ಯಾವುದೇ ಆರೋಪಿಯನ್ನು ಬಂಧಿಸುವಲ್ಲಿ ವಿಳಂಬ ನೀತಿ ಅನುಸರಿಸಲಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಈ ಪ್ರಕರಣಕ್ಕೆ ನ್ಯಾಯ ಒದಗಿಸದಿದ್ದಲ್ಲಿ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ದಿನವೇ ಪ್ರತಿಭಟನೆ ಮಾಡಲಾಗುವುದು ಎಂದು ಸಾಮಾಜಿಕ ಹೋರಾಟಗಾರರ ತಂಡ ಎಚ್ಚರಿಕೆ ನೀಡಿದ ಘಟನೆ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ನಡೆಯಿತು.
ಪಟ್ಟಣದ ತಾಲ್ಲೂಕು ಕಚೇರಿಯ ಕಂದಾಯಭವನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಸಭೆಗೆ ಆಗಮಿಸಿದ್ದ ಸಾಮಾಜಿಕ ಹೋರಾಟಗಾರರ ತಂಡವು ಕಳೆದ 2019 ರ ಡಿಸೆಂಬರ್ನಲ್ಲಿ ನಡೆದ ರಾಷ್ಟ್ರಧ್ವಜ ವಿರೂಪಗೊಳಿಸಿದ ಪ್ರಕರಣವನ್ನು ಎರಡು ವರ್ಷ ಕಳೆದರೂ ಜೀವಂತ ಉಳಿಸಿಕೊಂಡಿದ್ದಲ್ಲದೆ, ತನಿಖೆ ವಿಳಂಬ ಮಾಡಲಾಗಿದೆ. ಶಾಲೆಯ ಶಿಕ್ಷಕರ ಶೀತಲ ಸಮರದಿಂದ ರಾಷ್ಟ್ರಧ್ವಜಕ್ಕೆ ಅವಮಾನವಾಗಿದೆ. ಈ ಬಗ್ಗೆ ನಿರಂತರವಾಗಿ ಹೋರಾಟ ಮಾಡಿದ್ದರೂ ವಿಳಂಬ ಅನುಸರಿಸಿದ್ದು ಸರಿಯಲ್ಲ ಎಂದು ಕಿಡಿಕಾರಿದರು.
ಎರಡು ವರ್ಷದಲ್ಲಿ ನಾಲ್ಕನೇ ರಾಷ್ಟ್ರೀಯ ಹಬ್ಬ ಆಚರಣೆಯಲ್ಲೂ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲಿಲ್ಲ. ಆರೋಪಿಗಳ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೂ ಬಂಧಿಸುವಲ್ಲಿ ಮೀನಾಮೇಷ ಎಣಿಸಲಾಗಿದೆ. ಸಿಸಿ ಕ್ಯಾಮರಾದ ದೃಶ್ಯ ದಾಖಲೆ ಅಳಿಸಲಾಗಿದೆ ಎಂಬ ಕಾರಣಕ್ಕೆ ಹಾರ್ಡ್ಡಿಸ್ಕ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ತನಿಖೆ ವಿಳಂಬ ಮಾಡಲಾಗಿದೆ. ಆದರೆ ಹೋರಾಟಗಾರರ ತಂಡವು ನಿರಂತರ ಪ್ರಶ್ನಿಸಿ, ಪ್ರತಿ ರಾಷ್ಟ್ರೀಯ ಹಬ್ಬಕ್ಕೆ ಮುನ್ನ ಹೋರಾಟವನ್ನು ನಡೆಸಿದ್ದರ ಫಲ ಈ ಪ್ರಕರಣ ಒಂದು ಹಂತ ತಲುಪಿದೆ. ಬರುವ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಆರೋಪಿಗಳನ್ನು ಬಂಧಿಸದಿದ್ದಲ್ಲಿ ದಿನಾಚರಣೆ ದಿನವೇ ಹೋರಾಟ ನಡೆಸುವುದಾಗಿ ನಾಗಸಂದ್ರ ವಿಜಯ್ಕುಮಾರ್, ಜಿ.ಆರ್.ರಮೇಶ್, ಬಿ.ಲೋಕೇಶ್, ವಿನಯ್ ಒತ್ತಾಯಿಸಿದರು.
ಸಭೆಯಲ್ಲಿ ಪ್ರಸ್ತಾಪವಾದ ಈ ಪ್ರಕರಣದ ಬಗ್ಗೆ ಕೂಲಂಕುಷ ಮಾಹಿತಿ ಪಡೆದು ಕೂಡಲೇ ನ್ಯಾಯ ಒದಗಿಸುವ ಭರವಸೆ ನೀಡಿದ ತಹಶೀಲ್ದಾರ್ ಆರತಿ ಅವರು ಘಟನೆ ವಿಳಂಬಕ್ಕೆ ಅವಕಾಶ ನೀಡದೆ, ಆರೋಪಿ ವಿರುದ್ಧ ಕ್ರಮವಹಿಸುವ ಭರವಸೆ ನೀಡಿದರು. ನಂತರ ಮಾತಾನಾಡಿ ಕೋವಿಡ್ ನಿಯಮಾನುಸಾರ ಸ್ವಾತಂತ್ರ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುವುದು. ಸರ್ಕಾರದ ಮಾರ್ಗಸೂಚಿ ಪ್ರಕಾರ ಸರಳ ಆಚರಣೆ ಜೊತೆಗೆ ಕೊರೋನಾ ವಾರಿಯರ್ಸ್ಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು. ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯುವ ಈ ಕಾರ್ಯಕ್ರಮ ಧ್ವಜಾರೋಹಣದೊಂದಿಗೆ ಆರಂಭವಾಗಲಿದೆ. ಶಾಲಾ ಮಕ್ಕಳ ಅನುಪಸ್ಥಿತಿಯಲ್ಲಿ ಯಾವುದೇ ಸಾಂಸ್ಕøತಿಕ ಕಾರ್ಯಕ್ರಮವಿಲ್ಲದೇ 108 ತುರ್ತುವಾಹನ ಸಿಬ್ಬಂದಿಗಳಿಗೆ ಔಷಧಿ ಸಸಿಗಳನ್ನು ನೀಡುವ ಮೂಲಕ ಸನ್ಮಾನಿಸಲಾಗುವುದು ಎಂದರು.
ಸಭೆಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪರಮೇಶ್ವರಪ್ಪ, ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ, ತಾಪಂ ಇಓ ನರಸಿಂಹಯ್ಯ, ಬಿಇಓ ಸಿ.ಸೋಮಶೇಖರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದುಮಾಧವ, ಪ್ರಾಚಾರ್ಯ ವೆಂಕಟಾಚಲಯ್ಯ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
